ಒತ್ತಾಯ ಮತಾಂತರ: ಸ್ವಪ್ರೇರಣೆಯಿಂದಲ್ಲದೆ ಬಲಾತ್ಕಾರವಾಗಿ ನಡೆಯುವ ಮತಪರಿವರ್ತನೆಗೆ ಈ ಹೆಸರಿದೆ. ಹಿಂದೂ ಧರ್ಮ ಮೊದಲಿನಿಂದಲೂ ಇತರ ಧರ್ಮದವರನ್ನು ಮತಾಂತರಗೊಳಿಸುವುದನ್ನು ನಿಷೇಧಿಸುತ್ತದೆ. ಆದರೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಮತಪರಿವರ್ತನೆಯನ್ನು ಒಪ್ಪಿ ಮೊದಲಿನಿಂದಲೂ ಆ ಕೆಲಸವನ್ನು ಮಾಡುತ್ತ ಬಂದಿವೆ. ಕೊಲಂಬಸನ ಕಾಲದಿಂದಲೂ ಕ್ರೈಸ್ತ ಪಾದ್ರಿಗಳು ಅಮೆರಿಕ, ಆಫ್ರಿಕ, ಏಷ್ಯ ಮೊದಲಾದ ದೂರದೇಶಗಳಿಗೆ ಹೋಗಿ ನೆಲಸಿ ಧರ್ಮ ಪ್ರಚಾರ ಮಾಡುತ್ತ ಅಲ್ಲಿನ ಜನರಿಗೆ ಆರ್ಥಿಕ, ಸಾಮಾಜಿಕ ಪ್ರಲೋಭನಗಳನ್ನೊಡ್ಡಿ ಕ್ರಮೇಣ ಅವರನ್ನು ಮತಾಂತರಗೊಳಿಸಿ ಕ್ರೈಸ್ತರನ್ನಾಗಿ ಮಾಡುತ್ತ ಬಂದಿದ್ದಾರೆ. ಇಸ್ಲಾಂ ರಾಜ್ಯಗಳವರು ತಾವು ದಾಳಿ ನಡೆಸಿ ಗೆದ್ದ ರಾಷ್ಟ್ರಗಳಲ್ಲಿ ಒತ್ತಾಯದಿಂದ ತಮ್ಮ ಧರ್ಮವನ್ನು ಹೇರಿ ಸೋತ ರಾಷ್ಟ್ರಗಳವರನ್ನು ಇಸ್ಲಾಂ ಧರ್ಮಕ್ಕೆ ಸೇರಿಸುತ್ತ ಬಂದಿದ್ದಾರೆ. ರಾಜ್ಯಾಡಳಿತ ವ್ಯವಸ್ಥೆಯಲ್ಲಿ ಮತಧರ್ಮಗಳಿಗೇ ಪ್ರಾಶಸ್ತ್ಯವಿದ್ದ ಮಧ್ಯಯುಗದ ಯುರೋಪಿನಲ್ಲಿ ಕ್ರೈಸ್ತರಿಗೂ ಮುಸ್ಲಿಮರಿಗೂ ಘೋರ ಯುದ್ಧಗಳಾಗಿವೆ. ಭಾರತದಲ್ಲಿ ಔರಂಗಜೇóಬನಿಗೂ ಶಿವಾಜಿಗೂ ನಡೆದ ಸಂಗ್ರಾಮಕ್ಕೆ ಮತಪರಿವರ್ತನೆಯೂ ಒಂದು ಕಾರಣವಾಗಿದೆ.
 
ಒತ್ತಾಯ ಮತಾಂತರ ಸಾಧುವಲ್ಲ. ವ್ಯಕ್ತಿ ತನ್ನ ಅಂತಃಕರಣ ಒಪ್ಪಿದಲ್ಲಿ ಯಾವ ಧರ್ಮಕ್ಕಾದರೂ ಪರಿವರ್ತನೆ ಹೊಂದಬಹುದು. ಅಷ್ಟಲ್ಲದೆ ಯಾರೂ ಆತನ ಮೇಲೆ ರಾಜಕೀಯ ಹಾಗೂ ಸಾಮಾಜಿಕ ಒತ್ತಾಯಗಳನ್ನು ಹೇರಿ ಬಲಾತ್ಕಾರದಿಂದಾಗಲಿ, ಬೆದರಿಕೆಯಿಂದಾಗಲಿ ಮತಾಂತರಗೊಳಿಸಬಾರದು. ಪ್ರಜಾಸತ್ತಾತ್ಮಕವಾದ ಸರ್ಕಾರಗಳು ಏರ್ಪಟ್ಟು ಜಾತ್ಯಾತೀತ ಭಾವನೆಗಳು ಬೆಳೆದಂತೆಲ್ಲ ಜಾತೀಯತೆ, ಮತೀಯತೆ, ಮತಾಂಧತೆಗಳು ಕಡಿಮೆಯಾಗುತ್ತಿವೆ; ಧರ್ಮಸಹಿಷ್ಣುತೆ ಮತಸಮಾನತೆಗಳು ಬೆಳೆಯುತ್ತಿವೆ. ಹರಿಜನರ ಸ್ಥಾನಮಾನಗಳು ಮತ್ತು ಮತಾಂತರದ ಬಗ್ಗೆ ಗಾಂಧೀಜಿಯವರೂ ಹಿಂದೂ ಮುಸಲ್ಮಾನ ಸೌಹಾರ್ದದ ಬಗ್ಗೆ ಅವರು ಮತ್ತು ಖಾನ ಅಬ್ದುಲ್ ಗಫಾರ್ ಖಾನರೂ ತಳೆದ ಧೋರಣೆ ಸ್ತುತ್ಯರ್ಹವಾಗಿದೆ.	(ಜಿ.ಎಚ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ